ಶ್ರೀ ವೀರೇಶ್ವರ ಪುಣ್ಯಾಶ್ರಮ, ಗದಗ
ಸಂಗೀತ, ಸಾಹಿತ್ಯ, ಕಲಾ ಸೇವೆ ಮತ್ತು ದೀನ ದಲಿತರ ಹಾಗೂ ಅಂಧ-ಅನಾಥರ ಬಾಳಿಗೆ ಬೆಳಕಾಗುವ ತ್ರಿವಿಧಿ ದಾಸೋಹಗಳ ಏಕೈಕ ದಿವ್ಯ ಧಾಮ.
ನಮ್ಮ ಋಷಿ ಪರಂಪರೆ
ಭಾರತೀಯ ಸಂಸ್ಕೃತಿ ಎನ್ನುವಾಗ ಕೆಲವು ಸಾವಿರ ವರ್ಷಗಳಿಂದ ಸತತವಾಗಿ ಹರಿದು ಬಂದ ನಮ್ಮ ಋಷಿ ಪರಂಪರೆಯನ್ನು ಜಗತ್ತಿನಲ್ಲೇ ವಿಶಿಷ್ಟ ಹಾಗೂ ಉತ್ತುಂಗ ವ್ಯವಸ್ಥೆಯನ್ನಾಗಿ ಉಲ್ಲೇಖಿಸಲೇ ಬೇಕು. ನಮ್ಮಲ್ಲಿ ಶ್ರೇಷ್ಠತ್ವದ ಸಂಕೇತವಾಗಿ ಪ್ರವಾಹದಂತೆ ಬಂದ ಈ ಋಷಿ ಪರಂಪರೆ ಇಂದಿಗೂ ನಡೆದುಕೊಂಡು ಬಂದಿರುವುದು ಆಪೂರ್ವ ವಿಶೇಷವಾಗಿದೆ. ವೇದಕಾಲದ ಪೂರ್ವದಿಂದಲೂ ಋಷಿಗಳ ಮತ್ತು ಅವರ ಆಶ್ರಮಗಳ ವಿವರಗಳು ಬರುತ್ತವೆ.
ಆಶ್ರಮಗಳು ಗುರುಕುಲ ಪದ್ಧತಿಯಲ್ಲಿ ವಿದ್ಯಾರ್ಜನೆ ನೀಡುವುದರ ಜೊತೆ ಜೊತೆಗೆ ಮಾನವನ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸಿವೆ. ಧಾರ್ಮಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಜನರೊಂದಿಗೆ ಒಂದಾಗಿ ಬೆರೆತು ಇಡೀ ಮಾನವಕುಲದ ಸಮಾಜದ ನೈತಿಕ ಜವಾಬ್ದಾರಿ ಹೊತ್ತುಕೊಂಡು ನಿರಂತರ ನಿರ್ಮಲೀಕರಣ ಮಾಡುತ್ತ ಎಲ್ಲರ ಆರೋಗ್ಯ ಕಾಪಾಡುತ್ತಿವೆ. ಭಾರತದಲ್ಲಿ ಎಲ್ಲೇ ಹೋಗಲಿ ಅಲ್ಲಿ ಆಶ್ರಮಗಳಿವೆ. ಈ ಆಶ್ರಮಗಳದ್ದೇ ಒಂದು ದೊಡ್ಡ ಕೊಡುಗೆ ಆಧ್ಯಾತ್ಮಕ್ಕೆ ಮಾತ್ರವಲ್ಲ ಜನರ ಸ್ವಸ್ಥ ಮನಸ್ಸಿಗೆ, ಆತ್ಮವಿಶ್ವಾಸಕ್ಕೆ ಹಾಗೂ ಆನಂದಕ್ಕೆ ಕಾರಣವಾಗಿದೆ. ಆಶ್ರಮಗಳದ್ದೇ ಒಂದು ವಿಶೇಷ ಶ್ರಮ, ಪರಿಶ್ರಮ, ಸಾಧನೆ, ತಪಸ್ಸು ಮಾಡುತ್ತಾ ಅಂತರಂಗ, ಬಹಿರಂಗಗಳನ್ನು ಅನ್ವೇಷಿಸುತ್ತ ಇರುವ ಈ ಕೇಂದ್ರಗಳು ಅಪ್ಪಟ ಭಾರತೀಯ.
ತ್ರಿವಿಧ ದಾಸೋಹ ಕ್ಷೇತ್ರ
ಗದಗ ಶ್ರೀ ವೀರೇಶ್ವರ ಪುಣ್ಯಾಶ್ರಮವು ಗುರುಕುಲ ಪದ್ಧತಿಯಲ್ಲಿ ಮಾನವನ ಸರ್ವಾಂಗೀಣ ಅಭಿವೃದ್ಧಿಯ ಜೊತೆ ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಬಂದಿದೆ. ಸಂಗೀತ, ಸಾಹಿತ್ಯ, ಕೀರ್ತನ, ಪುರಾಣ ಪ್ರವಚನ, ಕನ್ನಡ, ಹಿಂದಿ ಸಂಸ್ಕೃತ ತರ್ಕಶಾಸ್ತ್ರಗಳ ಶಿಕ್ಷಣವನ್ನು ಉಚಿತವಾಗಿ ಅಂಧ-ಅನಾಥ, ವಿಕಲಾಂಗ ಮತ್ತು ಬಡ ಮಕ್ಕಳಿಗೆ ಅನ್ನದಾಸೋಹ, ಬಟ್ಟೆ, ವಸತಿಯನ್ನು ಕಲ್ಪಿಸಿ ವಿದ್ಯಾದಾನ ಮಾಡಿ ಸಮಾಜದಲ್ಲಿ ಉತ್ತಮ ನಾಗರಿಕರನ್ನಾಗಿ ಬೆಳೆಸಿ ರಾಷ್ಟ್ರಕ್ಕೆ ಸಾವಿರಾರು ಸಂಗೀತ ಕಲಾವಿದರನ್ನು ನೀಡಿದ ಭಾರತದ ಏಕೈಕ ಆಶ್ರಮವಾಗಿದೆ.
ಸ್ಥಾಪನೆ ಹಾಗೂ ವಿಕಾಸ
ಶ್ರೀ ವೀರೇಶ್ವರ ಪುಣ್ಯಾಶ್ರಮವು ಹಾದುಬಂದ ಪವಿತ್ರ ಹಾದಿಯ ಮೈಲಿಗಲ್ಲುಗಳು.
ಶ್ರೀ ಕುಮಾರೇಶ ಕೃಪಾಪೋಷಿತ ಸಂಗೀತ ವಿದ್ಯಾಲಯ
ಲಿಂ. ಪಂ. ಪಂಚಾಕ್ಷರ ಗವಾಯಿಗಳವರಿಂದ ಕ್ರಿ.ಶ. 1914ರ ವೈಶಾಖ ಶುದ್ಧ ಅಕ್ಷಯತೃತೀಯ ಬಸವ ಜಯಂತಿಯ ಶುಭ ಮುಹೂರ್ತದಲ್ಲಿ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಸಾನಿಧ್ಯದಲ್ಲಿ ಧಾರವಾಡ ಜಿಲ್ಲೆಯ ರೋಣ ತಾಲೂಕಿನ ನಿಡಗುಂದಿ ಕೊಪ್ಪದಲ್ಲಿ “ಶ್ರೀ ಕುಮಾರೇಶ ಕೃಪಾಪೋಷಿತ ಪಂಡಿತ ಪಂಚಾಕ್ಷರ ಗವಾಯಿಗಳ ಸಂಗೀತ ಸಾಹಿತ್ಯ ಮಹಾವಿದ್ಯಾಲಯ” ಸ್ಥಾಪನೆಯಾಯಿತು.
ಶ್ರೀ ವೀರೇಶ್ವರ ಪುಣ್ಯಾಶ್ರಮದ ಸ್ಥಾಪನೆ
ರಾಜ್ಯದ ಮೂಲೆ ಮೂಲೆಗೂ 25 ವರ್ಷಗಳ ಕಾಲ ಸಂಚರಿಸಿ ಸಂಗೀತ ಕಲೆಯ ಅಭಿವೃದ್ಧಿ ಪಡಿಸುತ್ತಾ, ಗದಗ ನಗರಕ್ಕೆ ಬಂದು ದಾನಶೂರ ಬಸರಿಗಿಡದ ವೀರಣ್ಣನವರು ದಾನ ನೀಡಿದ ಭೂಮಿಯಲ್ಲಿ ಸ್ಥಿರವಾದ ಸಂಗೀತ ಮಹಾವಿದ್ಯಾಲಯ ನೆಲೆನಿಂತಿತು. ಬಸರಿಗಿಡದ ವೀರಣ್ಣನವರ ಸವಿನೆನಪು ಮತ್ತು ಪ್ರಥಮ ಬಾರಿಗೆ ನಾಲತ್ತವಾಡದ ಶ್ರೀ ವೀರೇಶ್ವರ ಮಹಾಶರಣರ ಪುರಾಣ ಪ್ರವಚನ ಏರ್ಪಡಿಸಿದ್ದರ ಸವಿನೆನಪಿಗಾಗಿ ಪಂ. ಪಂಚಾಕ್ಷರ ಗವಾಯಿಗಳವರು ಇದಕ್ಕೆ ಶ್ರೀ ವೀರೇಶ್ವರ ಪುಣ್ಯಾಶ್ರಮ ಎಂದು ನಾಮಕರಣ ಮಾಡಿದರು.
ನಮ್ಮ ಶಿಕ್ಷಣ ಸಂಸ್ಥೆಗಳು
1989-90 ರಿಂದ ಡಾ|| ಪುಟ್ಟರಾಜ ಗವಾಯಿಗಳ ಅಂಧರ ಶಿಕ್ಷಣ ಸಮಿತಿ ಅಡಿಯಲ್ಲಿ ನಡೆಯುತ್ತಿರುವ 14 ಶಾಲೆ, ಕಾಲೇಜು ಮತ್ತು ವಸತಿ ನಿಲಯಗಳು:
ಕುಮಾರೇಶ್ವರ ಕೃಪಾಪೋಷಿತ ಪಂ. ಪಂಚಾಕ್ಷರ ಗವಾಯಿಗಳ ಸಂಗೀತ ಪಾಠ ಶಾಲೆ, ಗದಗ.
ಪಂ. ಪಂಚಾಕ್ಷರ ಗವಾಯಿಗಳವರ ಸಂಗೀತ ಮಹಾವಿದ್ಯಾಲಯ, ಗದಗ.
ಪಂ. ಪಂಚಾಕ್ಷರ ಗವಾಯಿಗಳವರ ಕಲಾ ಮಹಾವಿದ್ಯಾಲಯ, ಗದಗ.
ಪಂ. ಪಂಚಾಕ್ಷರ ಗವಾಯಿಗಳವರ ಅಂಧರ ವಸತಿಯುತ ವಿಶೇಷ ಸಂಗೀತ ಮತ್ತು ಪ್ರಾಥಮಿಕ ಶಾಲೆ, ಗದಗ.
ಪಂ. ಪಂಚಾಕ್ಷರ ಗವಾಯಿಗಳವರ ಪ್ರೌಢಶಾಲೆ, ಗದಗ.
ಪಂ. ಪಂಚಾಕ್ಷರ ಗವಾಯಿಗಳವರ ಪ್ರಾಥಮಿಕ ಶಾಲೆ, ಗದಗ.
ಪಂ. ಪಂಚಾಕ್ಷರ ಗವಾಯಿಗಳವರ ಪದವಿ ಪೂರ್ವ ಮಹಾವಿದ್ಯಾಲಯ, ಗದಗ.
ಕುಮಾರೇಶ್ವರ ಕೃಪಾಪೋಷಿತ ಪುಟ್ಟರಾಜ ಗವಾಯಿಗಳ ಸಂಸ್ಕೃತ ಪಾಠ ಶಾಲೆ, ಗದಗ.
ಡಾ|| ಪಂ. ಪುಟ್ಟರಾಜ ಕವಿ ಗವಾಯಿಗಳವರ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳ ಅನುದಾನಿತ ವಸತಿ ನಿಲಯ, ಗದಗ.
ಡಾ|| ಪಂ. ಪುಟ್ಟರಾಜ ಕವಿ ಗವಾಯಿಗಳವರ ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ಅನುದಾನಿತ ವಸತಿ ನಿಲಯ, ಗದಗ.
ಮಾತೋಶ್ರೀ ನೀಲಮ್ಮತಾಯಿ ಶಿಶುವಿಹಾರ, ಗದಗ.
ಪಂ. ಪಂಚಾಕ್ಷರ ಗವಾಯಿಗಳವರ ಅಂಧರ ವಸತಿಯುತ ವಿಶೇಷ ಸಂಗೀತ ಶಾಲೆ, ದಾವಣಗೆರೆ.
ಪಂ. ಪಂಚಾಕ್ಷರ ಗವಾಯಿಗಳವರ ಶಿಕ್ಷಣ ಮಹಾವಿದ್ಯಾಲಯ, ಗದಗ.
ಪಂ. ಪಂಚಾಕ್ಷರ ಗವಾಯಿಗಳವರ ಡಿ.ಇಡಿ. ಶಿಕ್ಷಣ ವಿದ್ಯಾಲಯ, ಗದಗ.
ಪ್ರಮುಖ ಶಿಷ್ಯ ಪರಂಪರೆ
ರಾಷ್ಟ್ರದಾದ್ಯಂತ ಕೀರ್ತಿ ಪಡೆದ, ಆಶ್ರಮದಿಂದ ರೂಪಿಸಲ್ಪಟ್ಟ ಸಂಗೀತ ಲೋಕದ ಧೀಮಂತರು:
ಸುಸಜ್ಜಿತ ವಸತಿಗೃಹ
ಶ್ರೀ ವೀರೇಶ್ವರ ಪುಣ್ಯಾಶ್ರಮ ಆವರಣದಲ್ಲಿ ಅಮೇರಿಕಾದ ರೋಟರಿ ಸಂಸ್ಥೆಯ ನೆರವಿನಿಂದ 25 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾದ ವಸತಿ ಗೃಹವು ಆಶ್ರಮದಲ್ಲಿ ಉಚಿತ ಶಿಕ್ಷಣ, ತರಬೇತಿ ಪಡೆಯುತ್ತಿರುವ ಅಂಧ ಮಕ್ಕಳಿಗೆ ವಸತಿ ಸೌಕರ್ಯವನ್ನು ಒದಗಿಸಿದೆ.
ಪಂಡಿತ ಡಾ|| ಪುಟ್ಟರಾಜ ಕವಿ ಗವಾಯಿಗಳವರು ತಮ್ಮ 95ರ ಪ್ರಾಯದಲ್ಲಿಯೂ ಪ್ರತಿನಿತ್ಯ ಪೂಜೆ-ಪುನಸ್ಕಾರದೊಂದಿಗೆ ಪುಣ್ಯಾಶ್ರಮದ ಚಟುವಟಿಕೆಗಳನ್ನು ನಿರ್ದೇಶಿಸಿ ನಿಯಂತ್ರಿಸುತ್ತಿದ್ದರು.
ಆದರದ ಕರೆಯೋಲೆ
ಶ್ರೀ ವೀರೇಶ್ವರ ಪುಣ್ಯಾಶ್ರಮ ಸಾಮಾಜಿಕ ಸೇವೆಯನ್ನೇ ತನ್ನ ಅಂತಃ ಸತ್ವವನ್ನಾಗಿಸಿಕೊಂಡ ಒಂದು ಪುಣ್ಯತಾಣ. ಪ್ರಧಾನವಾಗಿ ಸಂಗೀತವನ್ನೊಳಗೊಂಡಂತೆ ಲಲಿತ ಕಲೆಗಳನ್ನು ಪೋಷಿಸುವ ಹಾಗೂ ಅಭಿವೃದ್ಧಿಪಡಿಸುವ ಸಾಂಸ್ಕೃತಿಕ ಕೇಂದ್ರ.
ಅದರ ಕುಲಪತಿಗಳಾಗಿದ್ದ ಪಂಡಿತ ಡಾ|| ಪುಟ್ಟರಾಜ ಗವಾಯಿಗಳ ತಪೋಬಲದಿಂದ, ಆಧ್ಯಾತ್ಮಿಕ ಸಾಧನೆಯಿಂದ ತನ್ನ ಹೆಗ್ಗಳಿಕೆಯನ್ನು ಹೆಚ್ಚಿಸಿಕೊಂಡಿರುವ ವಿಶಿಷ್ಟ ಮಠವೂ ಆಗಿದೆ. ಶ್ರೀಮಠದ ಸಂಸ್ಥಾಪಕ ಲಿಂಗೈಕ್ಯ ಪಂಡಿತ ಪಂಚಾಕ್ಷರ ಗವಾಯಿಗಳ ಪವಿತ್ರ ಸ್ಥಳ. ತಾವೂ ಶ್ರೀಮಠವನ್ನು ಸಂದರ್ಶಿಸಿ, ತಮಗೆಲ್ಲ ಆದರದ ಸ್ವಾಗತ.